ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಗೆಲುವು ಆಕಸ್ಮಿಕವಾಗುವ ಬದಲು ಚಟವಾಗಲಿ!

ನೀವು ಯಾವುದೇ ಹೊಸ ಸಾಹಸಕ್ಕೆ ಅಣಿಯಾಗಿ, ನಿಮ್ಮ ಸ್ನೇಹಿತರ ಮುಂದೋ, ಸಂಬಂಧಿಕರ ಮುಂದೋ ನಿಮ್ಮ ಕನಸಿನ ಯೋಜನೆಯನ್ನು ಹಂಚಿಕೊಳ್ಳಿ. ಯಾರೂ ಅದನ್ನು ಪ್ರೋತ್ಸಾಹಿಸುವುದಿಲ್ಲ.  ‘ಎಲ್ಲಾ ಬಿಟ್ಟ ಬಂಗಿ ನೆಟ್ಟ ಅನ್ನೋ ಹಾಗೆ ಆಯ್ತಲ್ಲಾ? ನಿನ್ನ ಪಾಡಿಗೆ ನೀನು ಸುಮ್ಮನಿರಬಾರದಾ? ಅಂಥ ಸಾಹಸ ಮಾಡಿ ಯಾರೂ ಉದ್ಧಾರ ಆಗಿಲ್ಲ.’ ಅಂತಾನೇ ಎಲ್ಲರೂ ಹೇಳೋದು. ‘ಇದು ಗ್ರೇಟ್ ಐಡಿಯಾ, ಮುನ್ನುಗ್ಗು’ ಅಂತ ಯಾರೂ ಹೇಳುವುದಿಲ್ಲ.

ಇನ್ನು ಕೆಲವರು ಹೊಸ ಸಾಹಸಕ್ಕೇನೋ ಅಣಿಯಾಗುತ್ತಾರೆ. ಆದರೆ ಬೇರೆಯವರು ನಡೆದ ಹಾದಿಯಲ್ಲೇ ನಡೆಯುತ್ತಾರೆ. ಹೊಸ ಮಾರ್ಗ ಅರಸಲು, ಎಲ್ಲರೂ ತುಳಿದ ಹಾದಿ ಬಿಟ್ಟು ತಮ್ಮದೇ ದಾರಿ ನಿರ್ಮಿಸಲು ಬಯಸುವುದಿಲ್ಲ. ಅಂದರೆ ಹೊಸತಾಗಿ ಏನನ್ನೂ ಯೋಚಿಸುವುದಿಲ್ಲ. ಎಲ್ಲರೂ ದರ್ಶಿನಿ ಆರಂಭಿಸಿದರೆ ಇವರೂ ದರ್ಶಿನಿಯನ್ನೇ ತೆರೆಯುತ್ತಾರೆ. ಎಲ್ಲರೂ ಮಾಲ್ ಅನ್ನು ಕಟ್ಟಿದರೆ ಇವರೂ ಅದನ್ನೇ ಕಟ್ಟುತ್ತಾರೆ. ಯಾರೋ ಒಂದು ರೀತಿಯ ಸಿನಿಮಾ ನಿರ್ಮಿಸಿದರೆ ಇವರೂ ಅಂಥದೇ ಸಿನಿಮಾ ನಿರ್ಮಿಸುತ್ತಾರೆ. ಈ ಮಾತನ್ನು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸಬಹುದು. ಹೊಸತಾಗಿ ಯೋಚಿಸುವವರು ಮಾತ್ರ ಅಚ್ಚರಿ, ಸೋಜಿಗವನ್ನುಂಟು ಮಾಡಲು ಸಾಧ್ಯ. ಹೊಸ ದಾರಿ ಅರಸುವವರು ಹೊಸ ನೋಟವನ್ನು, ಹೊಸ ಊರನ್ನು ಕಾಣಲು ಸಾಧ್ಯ.

ಇದನ್ನು ಮಾಡದವರು ಜೀವನದಲ್ಲಿ ನಕಲು ಮಾಡುತ್ತಾರೆ, ಕಾಪಿ-ಪೇಸ್ಟ್ ಮಾಡುತ್ತಾರೆ, ಬೇರೆಯವರು ಹೋದ ದಾರಿಯಲ್ಲಿಯೇ ನಡೆಯುತ್ತಾರೆ. ಇಂಥವರು ಇದ್ದದ್ದನ್ನು ಮುನ್ನಡೆಸಿಕೊಂಡು ಹೋಗಬಲ್ಲರು. ಆದರೆ ಹೊಸತೇನನ್ನೂ ಸೃಷ್ಟಿಸಲಾರರು.

ಇನ್ನೊಂದು ರೀತಿ ಯೋಚನೆ ಮಾಡುವ ಮಂದಿಯಿರುತ್ತಾರೆ, ಅವರು ಸ್ಥಾಪಿತ ಯೋಚನೆಯಾಚೆ ತಮ್ಮನ್ನು ವಿಸ್ತರಿಸಿಕೊಳ್ಳಲು ಬಯಸುವುದಿಲ್ಲ. ‘ಮನುಷ್ಯನಿಗೆ ವಿಶ್ರಾಂತಿ ಅಗತ್ಯ, ಆದರೆ ನಿದ್ದೆಯ ಅಗತ್ಯ ಇಲ್ಲ’ ಅಂತ ಹೇಳಿ ಅವರು ‘ಇಲ್ಲ, ಇಲ್ಲ, ಮನುಷ್ಯನಿಗೆ ಕನಿಷ್ಠ ಎಂಟು ಗಂಟೆ ನಿದ್ದೆ ಬೇಕೇ ಬೇಕು’ ಅಂತ ವಾದಿಸುತ್ತಾರೆ. ಈ ವಿಷಯದಲ್ಲಿ ಅವರ ನಿಲುವನ್ನು ಬದಲಿಸಲು ಸಾಧ್ಯವೇ ಇಲ್ಲ. ಇವರು ಮಾತ್ರ ತಮ್ಮ ಅಭಿಪ್ರಾಯವನ್ನು ಬದಲಿಸಲಾರರು.

ಆದರೆ ಈ ಜಗತ್ತಿನಲ್ಲಿ ಸ್ಥಾಪಿತ ಅಭಿಪ್ರಾಯಕ್ಕೆ ಸವಾಲನ್ನು ಎಸೆದವರೇ ಸಾಧನೆಯ ಶಿಖರಕ್ಕೇರಿದವರು. ಅದು ಅರಿಸ್ಟಾಟಲ್ ಇರಬಹುದು, ನ್ಯೂಟನ್ ಇರಬಹುದು, ಕೋಪರ್್ನಿಕಸ್ ಇರಬಹುದು ಅಥವಾ ಸ್ಟೀವ್ ಜಾಬ್ಸ್ ಇರಬಹುದು, ಎಲ್ಲರೂ ಈ ಸಾಲಿಗೆ ಸೇರಿದವರೇ. ಭಿನ್ನವಾಗಿ ಯೋಚಿಸಿದವರೇ. ಅಪ್ಪ ನೆಟ್ಟ ಆಲದಮರಕ್ಕೆ ಜೋತುಬಿದ್ದಿದ್ದರೆ ಇವರು ಯಾರೆಂಬುದೇ ಗೊತ್ತಾಗುತ್ತಿರಲಿಲ್ಲ. ಇವರೆಲ್ಲ ಜೀವನದಲ್ಲಿ ರಿಸ್ಕ್ ತೆಗೆದುಕೊಂಡವರೇ. ಅಂಥ ರಿಸ್ಕ್ ತೆಗೆದುಕೊಳ್ಳದಿದ್ದರೆ ನಾವು ಇವರ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಿರಲಿಲ್ಲ.
ವಿ.ಅರ್.ಎಲ್ ಸಂಸ್ಥೆಯ ಮಾಲೀಕರಾದ ವಿಜಯ ಸಂಕೇಶ್ವರ ಅವರ ಬಗ್ಗೆ ಹೇಳಬೇಕು. ಕಾಲೇಜ್ ವಿದ್ಯಾಭ್ಯಾಸ ಮುಗಿದ ಬಳಿಕ ಅವರು ತಮ್ಮ ತಂದೆಯವರ ಪ್ರಿಂಟಿಂಗ್ ಪ್ರೆಸ್್ನಲ್ಲಿ ಪ್ರೂಫ್ ರೀಡರ್ ಆಗಿ ಸೇರಿಕೊಂಡರು. ಇವರ ತಂದೆಯವರಾದ ಬಸವೆಣ್ಣಪ್ಪ ಸಂಕೇಶ್ವರರು ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದರು. ಅವರು ಪ್ರಕಾಶಿಸಿದ ಭಾರಧ್ವಜ್ ಡಿಕ್ಷನರಿ ಇಲ್ಲದ ಕನ್ನಡ ಮನೆಗಳಿರಲಿಕ್ಕಿಲ್ಲ. ಅಲ್ಲಿ ವಿಜಯ ಸಂಕೇಶ್ವರರು ತಂದೆಯವರಿಗೆ ಸಹಾಯಕರಾಗಿ ಮತ್ತು ಕರಡು ತಿದ್ದುವವರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಪ್ರಾಯಶಃ ಅವರು ತಂದೆಯವರ ವೃತ್ತಿಯಲ್ಲಿ ಮುಂದುವರಿದಿದ್ದರೆ ಹೆಚ್ಚೆಂದರೆ ಒಬ್ಬ ಪ್ರಕಾಶಕರಾಗುತ್ತಿದ್ದರೇನೋ.

ಒಂದು ದಿನ ಅವರಿಗೆ ಅನಿಸಿತು. ತಾನು ಸ್ವಂತವಾಗಿ ಏನಾದರೂ ಸಾಧಿಸಬೇಕು, ತಂದೆಯವರ ನೆರಳನ್ನು ಬಿಟ್ಟು ಭಿನ್ನವಾಗಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು. ಒಂದು ದಿನ ಏಕಾಏಕಿ ತಂದೆಯವರ ಪ್ರೆಸ್ಸನ್ನು ಬಿಟ್ಟು, ಸಾಲ ಮಾಡಿ ಒಂದು ಸೆಕೆಂಡ್ ಹ್ಯಾಂಡ್ ಟ್ರಕ್ಕನ್ನು ಖರೀದಿಸಿದರು. ಅದಕ್ಕೆ ಅವರೇ ಮಾಲೀಕರು ಮತ್ತು ಅವರೇ ಚಾಲಕರು! ‘ನಿನಗೆ ಟ್ರಕ್ ದಂಧೆಯಲ್ಲಿ ಏನು ಅನುಭವವಿದೆ? ಅದು ನಮ್ಮಂಥವರು ಮಾಡುವ ದಂಧೆಯಾ? ಇದೆಲ್ಲ ನಿನ್ನ ಕೈಹಿಡಿಯುವಂಥದ್ದಲ್ಲ. ಸುಮ್ಮನೆ ಕೈ ಸುಟ್ಟುಕೊಳ್ಳಬೇಡ.’ ಎಂದು ಅವರ ತಂದೆ ಪರಿಪರಿಯಾಗಿ ಹೇಳಿದರು. ಮನೆಯಲ್ಲಿದ್ದವರ್ಯಾರೂ ಅವರ ಈ ಹೊಸ ಮತ್ತು ಹುಚ್ಚು ಸಾಹಸವನ್ನು ಹುರಿದುಂಬಿಸಲಿಲ್ಲ.

ಆದರೆ ವಿಜಯ ಸಂಕೇಶ್ವರ ಅವರು ಕೇಳಲಿಲ್ಲ. ಕುಟುಂಬದಲ್ಲಿ ಯಾರೂ ಮಾಡದಿದ್ದರೇನಂತೆ, ನಾನು ಮಾಡುತ್ತೇನೆ ಎಂಬ ಛಲ ಮತ್ತು ಹಠದಿಂದ ಟ್ರಾನ್ಸ್್ಪೋರ್ಟ್ ದಂಧೆಯನ್ನು ಆರಂಭಿಸಿದರು. ಒಂದಿದ್ದ ಟ್ರಕ್ಕು ಎರಡಾಯಿತು, ಎರಡಿದ್ದಿದ್ದು ನಾಲ್ಕಾಯಿತು. ನಾಲ್ಕಿದ್ದದ್ದು ಹತ್ತಾಯಿತು. ಹತ್ತು ಇದ್ದಿದ್ದು ನೂರಾಯಿತು. ಇಂದು ಅವರು ಹತ್ತಿರ ಹತ್ತಿರ ನಾಲ್ಕು ಸಾವಿರ ಟ್ರಕ್ಕು ಮತ್ತು ಐನೂರಕ್ಕೂ ಹೆಚ್ಚು ಬಸ್ಸುಗಳನ್ನು ಹೊಂದಿದ್ದಾರೆ. ದೇಶದ ಹದಿನೆಂಟು ರಾಜ್ಯಗಳಲ್ಲಿ ತಮ್ಮ ವ್ಯಾಪಾರ-ವಹಿವಾಟು ಜಾಲವನ್ನು ಹೊಂದಿದ್ದಾರೆ. ನಮ್ಮ ದೇಶದಲ್ಲಿ ಖಾಸಗಿ ವಲಯದಲ್ಲಿ ಅತಿ ಹೆಚ್ಚು ವಾಹನಗಳನ್ನು ಹೊಂದಿದವರಲ್ಲಿ ಅಗ್ರಗಣ್ಯರಾಗಿದ್ದಕ್ಕೆ ಲಿಮ್ಕಾ ದಾಖಲೆ ಪುಸ್ತಕ ಇವರ ಹೆಸರನ್ನು ದಾಖಲಿಸಿಕೊಂಡಿದೆ.

ಬಹುತೇಕ ಸಂದರ್ಭಗಳಲ್ಲಿ ನಾವು ನಮ್ಮ ಸುತ್ತ ಸುರಕ್ಷ ವಲಯ (Comfort Zone) ವನ್ನು ನಿರ್ಮಿಸಿಕೊಳ್ಳುತ್ತೇವೆ. ತಪ್ಪೇನಿಲ್ಲ. ಆದರೆ ಅದರಿಂದ ಹೊರಬರುವುದೇ ಇಲ್ಲ. ಆ ವಲಯದ ಐಷಾರಾಮಕ್ಕೆ ಒಗ್ಗಿಕೊಂಡುಬಿಡುತ್ತೇವೆ. ಹೀಗಾಗಿ ಹೊಸ ಸಾಹಸಕ್ಕೆ ಮುಂದಾಗುವುದಿಲ್ಲ.

ನಾನು ಇತ್ತೀಚೆಗೆ ಕ್ಲಿಫ್ ಯಂಗ್ ಎಂಬ ಒಬ್ಬ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯಗಾಥೆ ಕುರಿತು ಓದುತ್ತಿದ್ದೆ. ಈತ ಆಸ್ಟ್ರೇಲಿಯಾದ ಆಲೂಗಡ್ಡೆ ರೈತ. ತನ್ನ ಅರವತ್ತೊಂದನೆ ವಯಸ್ಸಿನಲ್ಲಿ ಅವನಿಗೆ ಅನಿಸಿತು. ತಾನು ಇಲ್ಲಿಯವರೆಗಿನ ಬದುಕನ್ನು ಬರೀ ಅಲೂಗಡ್ಡೆ ಬೆಳೆಯುತ್ತಾ, ಅದರಲ್ಲಿ ಸುಖ ಕಾಣುತ್ತಾ, ಅದಷ್ಟೇ ಜೀವನವೆಂದು ಭಾವಿಸಿ ತನ್ನ ಇಡೀ ಯೌವನವನ್ನು ವ್ಯರ್ಥವಾಗಿ ಕಳೆದುಬಿಟ್ಟೆನಾ ಎಂದು ಅನಿಸಲಾರಂಭಿಸಿತು. ಆತ ಆ ಕ್ಷಣವೇ ನಿರ್ಧರಿಸಿದ. ಮುಂದಿನ ದಿನಗಳನ್ನಾದರೂ ಅತ್ಯಂತ ರೋಚಕವಾಗಿ ಕಳೆಯಬೇಕೆಂದು. ಇನ್ನು ಮಾಡುವ ಸಾಧನೆಯಿಂದ ಜನ ತನ್ನನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಆ ರೀತಿ ನನ್ನ ಸಾಧನೆಯಿರಬೇಕು ಎಂದು ತೀರ್ಮಾನಿಸಿದ.

ಇದಕ್ಕೆ ಕ್ಲಿಫ್ ಯಂಗ್ ಆಯ್ದುಕೊಂಡಿದ್ದು ಮ್ಯಾರಥಾನ್ ಓಟದ ಸ್ಪರ್ಧೆಯನ್ನು. 1983ರಲ್ಲಿ ಆತ ತನ್ನ ಅರವತ್ತೊಂದನೆಯ ವಯಸ್ಸಿನಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಿಂದ ಮೆಲ್ಬೋರ್ನ್ ತನಕ  875 ಕಿಮೀ ಉದ್ದದ ಅಲ್ಟ್ರಾ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದ! ಆ ಸ್ಪರ್ಧೆಯ ಸಂಘಟಕರು ಅವನನ್ನು ಕೇಳಿದರು – ‘ಈ ವಯಸ್ಸಿನಲ್ಲಿ ಇಂಥ ದುಸ್ಸಾಹಸವೇ? ಸಾಮಾನ್ಯವಾಗಿ ಇಪ್ಪತ್ತರಿಂದ-ಮೂವತ್ತು ವರ್ಷ ವಯಸ್ಸಿನವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಆದರೆ ನಿಮ್ಮ ವಯಸ್ಸನ್ನು ನೋಡಿದರೆ ನಮಗೆ ಆತಂಕವಾಗುತ್ತದೆ. ನಿಮ್ಮ ಆರೋಗ್ಯಕ್ಕೆ ಏನಾದರೂ ಆದರೆ ಏನು ಗತಿ? ದಯವಿಟ್ಟು ಹಠ ಮಾಡಬೇಡಿ. ಈ ಸ್ಪರ್ಧೆ ನಿಮಗಲ್ಲ.’  ಅದಕ್ಕೆ ಕ್ಲಿಫ್ ಯಂಗ್ ಹೇಳಿದ – ‘ನಾನು ಒಬ್ಬ ಸಾಮಾನ್ಯ ರೈತ. ಜೀವನದಲ್ಲಿ ಹಿಂದೆಂದೂ ನಾನು ಇಂಥ ಸ್ಪರ್ಧೆಯಲ್ಲಿ ಭಾಗವಹಿಸಿಲ್ಲ ಅನ್ನೋದು ನಿಜ. ಇತ್ತೀಚೆಗೆ ನನ್ನ ಕುರಿಗಳೆಲ್ಲ ಕಾಣೆಯಾಗಿದ್ದವು. ನಾನು ಮೂರು ದಿನಗಳ ಕಾಲ ನಿದ್ದೆಯನ್ನೂ ಮಾಡದೇ ಓಡುತ್ತಾ ಇದ್ದೆ. ಆಗ ನನಗೆ ಅನಿಸಿತು, ನಾನು ಈ ಓಟದಲ್ಲಿ ಭಾಗವಹಿಸಬಹುದು ಅಂತ. ಅದಕ್ಕಿಂತ ಹೆಚ್ಚಾಗಿ ನಾನು ನನ್ನ ಜೀವನವನ್ನು ವ್ಯರ್ಥವಾಗಿ ಕಳೆದಿದ್ದೇನೆಂದು ನನಗೆ ಈಗ ಅನಿಸುತ್ತಿದೆ. ಇನ್ನು ಮುಂದಿನ ಜೀವನವನ್ನು ರೋಚಕವಾಗಿ ಕಳೆಯಬೇಕೆಂಬುದು ನನ್ನ ಇರಾದೆ. ಅದಕ್ಕಾಗಿ ಈ ಹುಚ್ಚು ಸಾಹಸಕ್ಕೆ ಅಣಿಯಾಗಿದ್ದೇನೆ. ದಯವಿಟ್ಟು ಇಲ್ಲ ಅಂತ ಹೇಳಬೇಡಿ.’

ಮ್ಯಾರಥಾನ್್ನಲ್ಲಿ ಭಾಗವಹಿಸಿದವರು ಪ್ರತಿದಿನ ಹದಿನಾರು ತಾಸು ಓಡಿ, ಎಂಟು ತಾಸು ನಿದ್ದೆ ಮಾಡುತ್ತಾರೆ. ಇದೇ ಕ್ರಮವನ್ನು ಐದು ದಿನಗಳ ಕಾಲ ಅನುಸರಿಸುತ್ತಾರೆ. ಆದರೆ ಕ್ಲಿಫ್ ಯಂಗ್  ಒಂದು ಗಂಟೆ ಸಹ ಮಲಗಲೇ ಇಲ್ಲ. ಸತತ ಮೂರು ದಿನಗಳ ಕಾಲ ಓಡಿದ. ಎಲ್ಲರಿಗಿಂತ ಒಂದೂವರೆ ದಿನ ಮುಂಚೆಯೇ ಗುರಿ ತಲುಪಿದ. ಮೂವತ್ತೈದು ತಾಸುಗಳ ಅಂತರದಲ್ಲಿ ಹಿಂದಿನ ದಾಖಲೆಯನ್ನು ಮುರಿದ.

ಈತನ ಜತೆ ಓಡಿದವರೆಲ್ಲ ಕ್ಲಿಫ್ ಅನ್ನು ಲಘುವಾಗಿ ಪರಿಗಣಿಸಿದ್ದರು. ಈ ಮುದುಕ ಹೆಚ್ಚೆಂದರೆ ಎರಡು ತಾಸು ಓಡಿ ಕಾಲು ಊದಿಸಿಕೊಂಡು ಸುಮ್ಮನೆ ಕುಳಿತುಕೊಳ್ಳಬಹುದು ಎಂದು ಪ್ರತಿಸ್ಪರ್ಧಿಗಳು ಭಾವಿಸಿದ್ದರು. ನಿದ್ದೆಯಿಲ್ಲದೇ ಎರಡು-ಮೂರು ದಿನ ಓಡುವುದು ಸಾಧ್ಯವಿದೆ ಎಂದಾಗ ಯಾರೂ ನಂಬಿರಲಿಲ್ಲ. ಹದಿನಾರು ತಾಸು ಓಡಿದ ಬಳಿಕ ಎಂಟು ತಾಸು ಮಲಗಲೇಬೇಕು ಎಂಬುದು ಎಲ್ಲರ ನಂಬಿಕೆಯಾಗಿತ್ತು. ಆದರೆ ಕ್ಲಿಫ್ ಅವೆಲ್ಲ ನಂಬಿಕೆಗಳನ್ನು ಮುರಿದ. ಅರವತ್ತು ದಾಟಿದವರೂ ಮ್ಯಾರಥಾನ್್ನಲ್ಲಿ ಭಾಗವಹಿಸಬಹುದು ಎಂಬುದನ್ನು ತೋರಿಸಿಕೊಟ್ಟ.

ಕ್ಲಿಫ್ ಬಗ್ಗೆ ಓದುವಾಗ ಆತ ಹೇಳಿದ ಒಂದು ಮಾತು – ‘ನಿಮಗೆ ಸಾಧನೆ ಮಾಡಬೇಕೆಂದೆನಿಸಿದಾಗ ಈಗ ಇರುವ ಸೂತ್ರಗಳ ಹಿಂದೆ ಹೋಗಬೇಡಿ. ನಿಮ್ಮ ಸೂತ್ರವೇನು ಎಂಬುದನ್ನು ನಿರ್ಧರಿಸಿ. ಅದೇನು ಎಂಬುದು ನಿಮಗೆ ಮಾತ್ರ ಗೊತ್ತಿರಲು ಸಾಧ್ಯ.’

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಜಾಕ್ ಕೇನ್್ಫೀಲ್ಡ್್ನ ಸಂದರ್ಶನ ಓದುತ್ತಿದ್ದೆ. ಇವನ ಹೆಸರನ್ನು ಕೇಳಿದರೆ ತಟ್ಟನೆ ಇವನ್ಯಾರೆಂದು ಗೊತ್ತಾಗಲಿಕ್ಕಿಲ್ಲ. ಆದರೆ ಈತ ಬರೆದ ಪುಸ್ತಕಗಳ ಹೆಸರನ್ನು ಹೇಳಿದರೆ, ಸಂಶಯವೇ ಇಲ್ಲ, ನಿಮಗೆ ಗೊತ್ತಾಗುತ್ತದೆ. ಅಂದ ಹಾಗೆ ಈತ ಬರೆದ ಪುಸ್ತಕದ ಹೆಸರು  chicken soup for the soul.ಇಲ್ಲಿ ತನಕ ಈ ಪುಸ್ತಕದ ಎಷ್ಟು ಪ್ರತಿಗಳು ಜಗತ್ತಿನಾದ್ಯಂತ ಎಷ್ಟು ಮಾರಾಟವಾಗಿವೆ ಎಂಬುದು ಯಾರಿಗೂ ಗೊತ್ತಿಲ್ಲ. ಮಿಲಿಯನ್, ಬಿಲಿಯನ್ ಬಿಡಿ, ಗ್ಯಾಜಿಲಿಯನ್್ಗಳಲ್ಲಿ ಲೆಕ್ಕ ಹಾಕಬೇಕು. ಓದುಗರನ್ನು ತಟ್ಟನೆ ಆಕರ್ಷಿಸುವುದಕ್ಕೆ ಅದರ ಹೆಸರೂ ಒಂದು ಕಾರಣ. ಈ ಪುಸ್ತಕ ಬರೆದಾಗ ಅದಕ್ಕೆ ಹೆಸರೇನಿಡಬೇಕೆಂದು ಆತ ತಿಂಗಳುಗಟ್ಟಲೆ ತಲೆಕೆಡಿಸಿಕೊಂಡಿದ್ದನಂತೆ. ‘ಚಿಕನ್ ಸೂಪ್ ಫಾರ್ ದಿ ಸೋಲ್್’ ಎಂಬ ಹೆಸರಿನಲ್ಲಿ ಬೇರೆ ಬೇರೆ ವಿಷಯಗಳಿಗೆ ಸೇರಿದ ಅನೇಕ ಕೃತಿಗಳು ಹೊರಬಂದಿವೆ.

ಮೊದಲ ಬಾರಿಗೆ ಈ ಪುಸ್ತಕವನ್ನು ಬರೆದಾಗ ಯಾವ ಪ್ರಕಾಶಕನೂ ಅದನ್ನು ಪ್ರಕಟಿಸಲು ಮುಂದೆ ಬರಲಿಲ್ಲ. ಒಬ್ಬರು ಇಬ್ಬರಾಗಿದ್ದರೆ ಪರವಾಗಿರಲಿಲ್ಲ. ಜಾಕ್ ಸುಮಾರು 140 ಪ್ರಕಾಶಕರಿಗೆ ಹಸ್ತಪ್ರತಿಗಳನ್ನು ತೋರಿಸಿದ. ಅವರ್ಯಾರೂ ಈ ಪುಸ್ತಕದ ಬಗ್ಗೆ ಸ್ವಲ್ಪವೂ ಉತ್ಸಾಹ ತೋರಲಿಲ್ಲ. ಆದರೆ ಜಾಕ್ ಸುಮ್ಮನಾಗಲಿಲ್ಲ. ಬೇರೆಯವರಾಗಿದ್ದರೆ, ಪುಸ್ತಕದ ಹಸ್ತಪ್ರತಿಯನ್ನು ‘ತೂಕ’ಕ್ಕೆ ಹಾಕಿ ಕೈತೊಳೆದುಕೊಳ್ಳುತ್ತಿದ್ದರು. ಆದರೆ ಜಾಕ್್ಗೆ ತನ್ನ ಕೃತಿಯ ಬಗ್ಗೆ ವಿಶ್ವಾಸವಿತ್ತು. ಇಂಥದ್ದೊಂದು ಪ್ರಯತ್ನವನ್ನು ಯಾರೂ ಮಾಡಿಯೇ ಇಲ್ಲ ಎಂಬ ಬಗ್ಗೆ ಹೆಮ್ಮೆಯೂ ಇತ್ತು. ಹೀಗಾಗಿ ಆತ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ತನ್ನ ಯೋಚನೆ ಅರ್ಥವಾಗುವ ತನಕ ಈ ಸಮಸ್ಯೆ ಇದ್ದೇ ಇರುತ್ತದೆ, ಆನಂತರ ಎಲ್ಲ ಸರಿ ಹೋಗುತ್ತದೆ ಎಂದೇ ಆತ ಭಾವಿಸಿದ್ದ. ಹಾಗೇ ಆಯಿತು. ಆತನ ಎಣಿಕೆ ನಿಜವಾಗಿತ್ತು.

ಮೊದಲ ಕೃತಿಯ ಕೊನೆಯಲ್ಲಿ ಜಾಕ್ ಬರೆದಿದ್ದ- ‘ನಿಮ್ಮ ಬಳಿ ಬೇರೆಯವರೊಂದಿಗೆ ಹಂಚಿಕೊಳ್ಳುವ ಅದ್ಭುತವೆನಿಸುವ ಕತೆಗಳಿದ್ದರೆ, ಪ್ರಸಂಗಗಳಿದ್ದರೆ, ನೈಜ ಘಟನೆಗಳಿದ್ದರೆ ಅವುಗಳನ್ನೆಲ್ಲ ನಮಗೆ ಕಳಿಸಿಕೊಡಿ. ಅವನ್ನೆಲ್ಲ ಎರಡನೆ ಪುಸ್ತಕದಲ್ಲಿ ಸೇರಿಸುತ್ತೇನೆ.’

ಜಾಕ್ ಕನಸು -ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ದಿನಕ್ಕೆ 200ಕ್ಕೂ ಹೆಚ್ಚು ಕತೆಗಳು ಬರಲಾರಂಭಿಸಿದವು. ಅವುಗಳನ್ನೆಲ್ಲ ಸೇರಿಸಿ ‘ಚಿಕನ್ ಸೂಪ್ ಫಾರ್ ದಿ ಸೋಲ್್’ ಹೆಸರಿನಡಿಯಲ್ಲಿ ಪ್ರಕಟಿಸಲಾರಂಭಿಸಿದ. ಇಲ್ಲಿ ತನಕ ಇದೇ ಶೀರ್ಷಿಕೆಯಡಿಯಲ್ಲಿ ಇನ್ನೂರಕ್ಕೂ ಹೆಚ್ಚು ವಿಷಯಗಳ ಕುರಿತ ಪುಸ್ತಕಗಳು ಪ್ರಕಟವಾಗಿವೆ. ಒಂದೊಂದು ಪುಸ್ತಕ ಐದು-ಹತ್ತು ಕೋಟಿ ಪ್ರತಿಗಳು ಮಾರಾಟವಾಗಿವೆ. ಇಂದು ‘ಚಿಕನ್ ಸೂಪ್…’ ಕೇಳದವರಿಲ್ಲ.

‘ಸಾಧನೆ, ಯಶಸ್ಸಿನ ಮಜಾ ಏನೆಂಬುದು ಅದರ ರುಚಿ ಹತ್ತಿಸಿಕೊಂಡವರಿಗೆ ಮಾತ್ರ ಗೊತ್ತು. ನೀವು ಏನನ್ನೂ ಸಾಧಿಸದಿದ್ದಾಗ ಸಾಲ ಕೊಡಲು ಯಾವ ಬ್ಯಾಂಕೂ ಮುಂದೆ ಬರುವುದಿಲ್ಲ. ಒಮ್ಮೆ ನೀವು ಗೆಲ್ಲುವ ಕುದುರೆ ಎಂಬುದು ಗೊತ್ತಾದರೆ, ಸಾವಿರಾರು ಮಂದಿ ಸಾಲ ಕೊಡಲು, ನಿಮ್ಮ ಮೇಲೆ ಹಣ ಹೂಡಲು ಮುಂದೆ ಬರುತ್ತಾರೆ. ಗೆಲುವು ಆಕಸ್ಮಿಕವಾಗಬಾರದು. ಅದೊಂದು ಚಟವಾಗಬೇಕು. ಅದರ ಆನಂದವೇನೆಂಬುದನ್ನು ಅನುಭವಿಸಿದವನೇ ಬಲ್ಲ’ ಅಂತಾನೆ ಜಾಕ್.

ಹೌದು, ಗೆಲುವಿನಂಥ ಚಟ ಇನ್ನೊಂದಿಲ್ಲ. ಈ ‘ದುರಭ್ಯಾಸ’ವನ್ನು ರೂಢಿಸಿಕೊಳ್ಳಬೇಕು!

-ವಿಶ್ವೇಶ್ವರ ಭಟ್

16 Comments

  1. This is very inspiring!

  2. geluvina bele, hagu geluvigaagi namma prayathna, nammadee soothra,entha vishayagla bgge gamana seleyuthhiri thank u sir suvarna

  3. blow hodedaga mathra namma tube nalli gaali tumbuthade. Swalpa samaya da nantara yella tussss…!

  4. ಕನಸುಗಳ ಕಟ್ಟಬೇಕು, ಕನಸುಗಳ ಹಿಂದೆ ನಿರಂತರ ಓಡಬೇಕು,,,,,,,,

  5. Dear Sir,

    Thank you so much for giving the Good Article.

  6. article was very good.

  7. thanks for an inspiring article sir!

  8. Thank you for the wonderful articles

  9. good article sir

  10. naanu innu munde saadhaneya haadiyalli saagutheeni. THANK YOU SIR…intha article kottiddakke.

  11. where their is a will their is a way…… This article give inspiration to readers………..

  12. NICE……..

  13. ಕ್ಲಿಫ್ ಬಗ್ಗೆ ಓದುವಾಗ ಆತ ಹೇಳಿದ ಒಂದು ಮಾತು – ‘ನಿಮಗೆ ಸಾಧನೆ ಮಾಡಬೇಕೆಂದೆನಿಸಿದಾಗ ಈಗ ಇರುವ ಸೂತ್ರಗಳ ಹಿಂದೆ ಹೋಗಬೇಡಿ. ನಿಮ್ಮ ಸೂತ್ರವೇನು ಎಂಬುದನ್ನು ನಿರ್ಧರಿಸಿ. ಅದೇನು ಎಂಬುದು ನಿಮಗೆ ಮಾತ್ರ ಗೊತ್ತಿರಲು ಸಾಧ್ಯ.
    ‘ಸಾಧನೆ, ಯಶಸ್ಸಿನ ಮಜಾ ಏನೆಂಬುದು ಅದರ ರುಚಿ ಹತ್ತಿಸಿಕೊಂಡವರಿಗೆ ಮಾತ್ರ ಗೊತ್ತು. ನೀವು ಏನನ್ನೂ ಸಾಧಿಸದಿದ್ದಾಗ ಸಾಲ ಕೊಡಲು ಯಾವ ಬ್ಯಾಂಕೂ ಮುಂದೆ ಬರುವುದಿಲ್ಲ. ಒಮ್ಮೆ ನೀವು ಗೆಲ್ಲುವ ಕುದುರೆ ಎಂಬುದು ಗೊತ್ತಾದರೆ, ಸಾವಿರಾರು ಮಂದಿ ಸಾಲ ಕೊಡಲು, ನಿಮ್ಮ ಮೇಲೆ ಹಣ ಹೂಡಲು ಮುಂದೆ ಬರುತ್ತಾರೆ. ಗೆಲುವು ಆಕಸ್ಮಿಕವಾಗಬಾರದು. ಅದೊಂದು ಚಟವಾಗಬೇಕು. ಅದರ ಆನಂದವೇನೆಂಬುದನ್ನು ಅನುಭವಿಸಿದವನೇ ಬಲ್ಲ’ ಅಂತಾನೆ ಜಾಕ್.

    ಹೌದು, ಗೆಲುವಿನಂಥ ಚಟ ಇನ್ನೊಂದಿಲ್ಲ. ಈ ‘ದುರಭ್ಯಾಸ’ವನ್ನು ರೂಢಿಸಿಕೊಳ್ಳಬೇಕು!

    INTHA ADBUTHA NIDUGALANU HELI NAMMALI UTSAHA TUMBUTIRUVA NIMAGE, NIMMA LEKHANNKE ABHINADHANE GALU

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.